ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಾದರಿಯ ಭವ್ಯ ವೆಂಕಟೇಶ್ವರ ದೇವಾಲಯ ನಿರ್ಮಾಣವಾಗಲಿದೆ. 100 ಕೋಟಿ ರೂ. ವೆಚ್ಚದಲ್ಲಿ ಏಳು ಎಕರೆ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ದೇಗುಲದ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದಲ್ಲಿ ದೇವಾಲಯ ನಿರ್ಮಾಣವಾಗಲಿದೆ.
ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಈ ಭವ್ಯ ದೇವಸ್ಥಾನಕ್ಕಾಗಿ, ಬೆಳಗಾವಿ ರೆಡ್ಡಿ ಸಂಘವು ಖರೀದಿಸಿದ್ದ ಏಳು ಎಕರೆ ಭೂಮಿಯನ್ನು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ (ಟಿಟಿಡಿ) ಅಧಿಕೃತವಾಗಿ ಹಸ್ತಾಂತರಿಸಿದೆ.
ಇತ್ತೀಚೆಗೆ ಸದಾಶಿವನಗರದ ರೆಡ್ಡಿ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಮಹತ್ವದ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿತು.
ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಲಿರುವ ಈ ದೇವಾಲಯದ ಸಂಪೂರ್ಣ ಕಾಮಗಾರಿಯು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ತಿರುಪತಿ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಭವ್ಯ ವಾಸ್ತುಶಿಲ್ಪ, ಲಡ್ಡು ಪ್ರಸಾದ ವಿತರಣೆ, ಭಕ್ತರ ವಾಸ್ತವ್ಯಕ್ಕೆ ಅಗತ್ಯವಿರುವ ಸೌಲಭ್ಯಗಳು ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಇಲ್ಲಿ ಲಭ್ಯವಾಗಲಿವೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಈ 100 ಕೋಟಿ ರೂ. ವೆಚ್ಚದ ದೇವಾಲಯ ನಿರ್ಮಾಣಕ್ಕೆ ಟಿಟಿಡಿ ತನ್ನ ನಿಧಿಯ ಜೊತೆಗೆ, ಭಕ್ತರು ಹಾಗೂ ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಲು ಉದ್ದೇಶಿಸಿದೆ. ದಾನಿಗಳ ಉದಾರ ಸಹಕಾರವು ಈ ಮಹತ್ವದ ಯೋಜನೆಗೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.
ಟಿಟಿಡಿ ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಇನ್ನೂ ಆರು ಪ್ರಮುಖ ಸ್ಥಳಗಳಲ್ಲಿ ನೂತನ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸಲು ಯೋಜಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರ ಮತ್ತು ಹೊಸ ದೇವಾಲಯಗಳ ನಿರ್ಮಾಣಕ್ಕಾಗಿ ಟಿಟಿಡಿ ಒಟ್ಟು 9,000 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.
ಬೆಳಗಾವಿಯಲ್ಲಿ ತಿಮ್ಮಪ್ಪನ ಈ ದೇವಾಲಯ ನಿರ್ಮಾಣದಿಂದ ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರಿಗೆ ಶ್ರೀ ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭವಾಗಲಿದೆ. ಅಲ್ಲದೆ, ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಕರು ಹಾಗೂ ಗೋವಾ ರಾಜ್ಯದ ಭಕ್ತರಿಗೂ ತಿರುಪತಿಯ ದರ್ಶನ ಭಾಗ್ಯಕ್ಕೆ ಅನುಕೂಲವಾಗಲಿದೆ. ಈ ದೇವಾಲಯವು ಬೆಳಗಾವಿಯ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೆಚ್ಚಿಸಲಿದೆ.
ಟಿಟಿಡಿ ದೇಗುಲದ ಪ್ರಮುಖಾಂಶಗಳು
- ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದಲ್ಲಿ ನಿರ್ಮಾಣ
- ಏಳು ಎಕರೆ ಪ್ರದೇಶದಲ್ಲಿ ಭವ್ಯ ಮಂದಿರ
- ಸುಮಾರು 100 ಕೋಟಿ ರೂ. ಅಂದಾಜು ವೆಚ್ಚ
- ಮುಂದಿನ ಎರಡು ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ
- ತಿರುಪತಿ ಮಾದರಿಯಲ್ಲೇ ಎಲ್ಲಾ ಸೌಲಭ್ಯಗಳು ಲಭ್ಯ
ರೆಡ್ಡಿ ಜನಸಂಘದ ಪ್ರಮುಖರ ಹೇಳಿಕೆ
- “ಬೆಳಗಾವಿ ರೆಡ್ಡಿ ಜನಸಂಘವು ವಿಶಾಲ ಹೃದಯದಿಂದ, ಇಡೀ ಜನಾಂಗಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಒಳಿತಾಗುವ ದೃಷ್ಟಿಯಿಂದ ಈ ಜಾಗವನ್ನು ಹಸ್ತಾಂತರಿಸಿದೆ.”
- “ಜಾತಿ, ಪಂಥಗಳನ್ನು ನೋಡದೆ ಎಲ್ಲರಿಗೂ ವೆಂಕಟೇಶ್ವರನ ಆಶೀರ್ವಾದ ಸಿಗಲಿ ಎಂಬುದು ನಮ್ಮ ಆಶಯವಾಗಿದೆ.”
- ಶೀಘ್ರದಲ್ಲೇ ನೂತನ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
- ಈ ಯೋಜನೆ ಬೆಳಗಾವಿಯನ್ನು ಶೈಕ್ಷಣಿಕ, ಸಾಮಾಜಿಕವಾಗಿ ಮಾತ್ರವಲ್ಲದೆ, ಧಾರ್ಮಿಕವಾಗಿಯೂ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಲಿದೆ.
- ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವೊಂದು ಉತ್ತರ ಕರ್ನಾಟಕದಲ್ಲಿ ತಲೆ ಎತ್ತುತ್ತಿರುವುದು ಭಕ್ತರ ಬಹುದಿನಗಳ ಕನಸನ್ನು ನನಸು ಮಾಡಲಿದೆ.






